By Village Missionary Movement
Friday, 10-Oct-2025ಧೈನಂದಿನ ಧ್ಯಾನ(Kannada) – 10.10.2025
ಕುರುಡನಿಗೆ ದಾರಿ ತೋರಿಸುವ ಕುರುಡ
"ನಿನ್ನ ರಕ್ಷಣಾನಂದವನ್ನು ನಾನು ತಿರಿಗಿ ಅನುಭವಿಸುವಂತೆ ಮಾಡು;... ಆಗ ನಿನ್ನ ಮಾರ್ಗವನ್ನು ದ್ರೋಹಿಗಳಿಗೆ ಬೋಧಿಸುವೆನು; ಪಾಪಿಗಳು ನಿನ್ನ ಕಡೆಗೆ ತಿರುಗಿಕೊಳ್ಳುವರು." - ಕೀರ್ತನೆ 51:12,13
'ಪ್ರೆಯರ್ ಹೈಡ್' ಎಂದು ಕರೆಯಲ್ಪಡುವ 'ಜಾನ್ ಹೈಡ್' ಎಂಬ ಮಿಷನರಿ ಭಾರತದಲ್ಲಿ ಸೇವೆ ಸಲ್ಲಿಸಲು ಹಡಗಿನಲ್ಲಿ ಪ್ರಯಾಣಿಸಿದರು. ಅವರು ಹಡಗನ್ನು ಹತ್ತುವಾಗ, ಅವರಿಗೆ ಒಂದು ಪತ್ರವನ್ನು ನೀಡಲಾಯಿತು. ಅದರಲ್ಲಿ, ಅವರ ತಂದೆಯ ಸ್ನೇಹಿತ ಈ ರೀತಿಯಾಗಿ ಬರೆದಿದ್ದರು. "ಜಾನ್, ನೀನು ಪವಿತ್ರಾತ್ಮದಿಂದ ತುಂಬುವವರೆಗೂ ನಾನು ನಿನಗಾಗಿ ಪ್ರಾರ್ಥಿಸುತ್ತಲೇ ಇರುತ್ತೇನೆ" ಎಂದು. ಇದನ್ನು ಓದಿದ ಜಾನ್ ಹೈಡ್ "ನಾನು ಪವಿತ್ರಾತ್ಮನಿಂದ ತುಂಬಿಸಲ್ಪಡದೆಯೇ ಭಾರತಕ್ಕೆ ಮಿಷನರಿಯಾಗಿ ಹೋಗುತ್ತಿದ್ದೇನೆಯೇ?" ಎಂದು ಬಹಳ ಕೋಪಗೊಂಡರು. ಸ್ವಲ್ಪ ಸಮಯದ ನಂತರ, ಪವಿತ್ರಾತ್ಮನಿಂದ ಪ್ರೇರೇಪಿಸಲ್ಪಟ್ಟು, ತನ್ನೊಳಗಿನ ಶೂನ್ಯತೆಯನ್ನೂ, ತನಗೆ ಮಿಷನರಿಯಾಗಿ ಹೋಗಲು ಸ್ವಲ್ಪವೂ ಅರ್ಹತೆಯೇ ಇಲ್ಲ ಎಂಬುದನ್ನೂ ಅರಿತುಕೊಂಡರು. ಆದ್ದರಿಂದ ಪವಿತ್ರಾತ್ಮನ ಅಭಿಷೇಕವನ್ನು ಪಡೆಯಲು ಅತ್ತು ಪ್ರಾರ್ಥಿಸಲು ಪ್ರಾರಂಭಿಸಿದರು. ಆದರೆ ಯಾವ ಪ್ರಯೋಜನವೂ ಆಗಲಿಲ್ಲ. ಆಗಲೇ ನಾನು ಇನ್ನೂ ರಕ್ಷಣೆ ಹೊಂದಿಲ್ಲ ಎಂದು ಪರಿಶುದ್ಧಾತ್ಮನ ಮೂಲಕ ಪ್ರೇರೇಪಿಸಲ್ಪಟ್ಟರು. ಒಂದು ಸುವಾರ್ತಾ ಕೂಟದಲ್ಲಿ, ಒಬ್ಬರು ಅವರ ಬಳಿಗೆ ಬಂದು, "ಮಿಷನರಿ ಅಯ್ಯನವರೇ, ನೀವು ರಕ್ಷಿಸಲ್ಪಟ್ಟಿದ್ದೀರಾ?" ಎಂದು ಕೇಳಿದರು. ಆ ಪ್ರಶ್ನೆ ಅವರ ಹೃದಯವನ್ನು ಮುರಿಯಿತು. ಅವರು ತಕ್ಷಣ, "ನನಗೆ ಪವಿತ್ರಾತ್ಮನ ಅಭಿಷೇಕವನ್ನು ಕೊಟ್ಟು ನನ್ನನ್ನು ರಕ್ಷಿಸಿ; ಇಲ್ಲದಿದ್ದರೆ, ನಾನು ಸುವಾರ್ತೆಯನ್ನು ಸಾರದೆಯೇ ಅಮೆರಿಕಕ್ಕೆ ಹೊರಟು ಹೋಗುತ್ತೇನೆ" ಎಂದು ಪ್ರಾರ್ಥಿಸಲು ಪ್ರಾರಂಭಿಸಿದರು. ಕರ್ತನು ಪ್ರಾರ್ಥನೆಯನ್ನು ಕೇಳಿ ಜಾನ್ ಹೈಡ್ನನ್ನು ರಕ್ಷಿಸಿ, ಪಾಪದ ಬಂಧನದಿಂದ ಬಿಡಿಸಿ, ಆತ್ಮನ ಅಭಿಷೇಕದಿಂದಲೂ, ಬಲದಿಂದಲೂ ಪ್ರಾರ್ಥನಾ ಆತ್ಮದಿಂದಲೂ ಮಿತಿಯಿಲ್ಲದೆ ತುಂಬಿದರು. ಇದರ ನಂತರ, ಇವರು ಜನರಿಗಾಗಿ ಪ್ರಾರ್ಥಿಸುತ್ತಿರುವಾಗಲೇ, ಜನರು ರಕ್ಷಿಸಲ್ಪಟ್ಟು, ಪ್ರಾರ್ಥನೆಯ ಆತ್ಮದಿಂದ ತುಂಬಲ್ಪಟ್ಟು ಅಭಿಷೇಕವನ್ನು ಪಡೆದುಕೊಂಡರು.
ಈ ದಿನಗಳಲ್ಲಿ ವಿಶೇಷವಾಗಿ ಅನೇಕ ಯುವಕರು ರಕ್ಷಣೆಯ ಅನುಭವವೇ ಇಲ್ಲದೆ, ಸೇವೆ ಸಲ್ಲಿಸುವುದನ್ನು ನೋಡಬಹುದು. ಸುಂದರವಾಗಿ ಹಾಡುವುದರಿಂದ, ಸಂಗೀತ ವಾದ್ಯಗಳನ್ನು ನುಡಿಸುವುದರಿಂದ, ಪ್ರಾರ್ಥಿಸುವುದರಿಂದ ಮತ್ತು ಸೇವಕರುಗಳ, ಬೋಧಕರುಗಳ ಮಕ್ಕಳಾಗಿರುವುದರಿಂದ ತಾವು ರಕ್ಷಿಸಲ್ಪಟ್ಟಿದ್ದೇವೆ ಎಂದು ತಮ್ಮನ್ನು ತಾವು ಮೋಸಗೊಳಿಸಿಕೊಳ್ಳುತ್ತಾರೆ. ಇವರು ತಾವು ಎಡವಿ ಬೀಳುವುದಲ್ಲದೆ, ಇತರರೂ ಎಡವಿ ಬೀಳುವಂತೆ ಮಾಡುತ್ತಾರೆ. ಯೇಸು ಇಂತಹ ಜನರಿಗೆ, "ಕುರುಡರು ಕುರುಡರನ್ನು ಮುನ್ನಡೆಸಲು ಸಾಧ್ಯವೇ? ಇಬ್ಬರೂ ಗುಂಡಿಗೆ ಬೀಳುವುದಿಲ್ಲವೇ?" ಎಂದು ಹೇಳಿದರು. ದೇವರಿಂದ ಪ್ರೇರಿತರಾದ ಜಾನ್ ಹೈಡ್, ಮಾನಸಾಂತರ ಹೊಂದಿ ರಕ್ಷಿಸಲ್ಪಟ್ಟು ಅಭಿಷೇಕದಿಂದ ತುಂಬಲ್ಪಟ್ಟು ನಂತರ ಸೇವೆ ಮಾಡಿದ ಹಾಗೆ, ಸೇವೆ ಮಾಡುವವರು ಮೊದಲು ಪಾಪ ಕ್ಷಮಾಪಣೆಯ ನಿಶ್ಚಯವನ್ನು ಪಡೆದು ನಂತರ ಸೇವೆ ಮಾಡಿದರೆ ಚೆನ್ನಾಗಿರುತ್ತದೆ. ಆಗ ಮಾತ್ರ "ಪಾಪಿಗಳು ನಿನ್ನ ಕಡೆಗೆ ತಿರುಗಿಕೊಳ್ಳುವರು" ಎಂಬ ವಚನವು (ಕೀರ್ತನೆ 51:13) ನೆರವೇರುತ್ತದೆ.
- Mrs. ಪ್ರಿಸ್ಕಿಲ್ಲಾ ಥಿಯೋಫಿಲಸ್
ಪ್ರಾರ್ಥನಾ ಅಂಶ:
ಮಿಷನರಿ ತರಬೇತಿ ಕಟ್ಟಡವನ್ನು ನಿರ್ಮಿಸಲು ಅನೇಕರು ತಮ್ಮ ಬೆಂಬಲವನ್ನು ನೀಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482