By Village Missionary Movement
Friday, 05-Jun-2026ಧೈನಂದಿನ ಧ್ಯಾನ(Kannada) – 05.06.2026
ಉಚಿತವಾದ ವಿಮೋಚನೆ
"...ನೀತಿವಂತರೆಂದು ನಿರ್ಣಯ ಹೊಂದುವದು ದೇವರ ಉಚಿತಾರ್ಥವಾದ ಕೃಪೆಯಿಂದಲೇ ಕ್ರಿಸ್ತಯೇಸುವಿನಿಂದಾದ ಪಾಪ ವಿಮೋಚನೆಯ ಮೂಲಕವಾಗಿ ಆಗುವದು" - ರೋಮಾ 3:24
ನಾವು ದೇವರಿಂದ ಲೋಕದಲ್ಲಿ ಅನೇಕ ವಿಷಯಗಳನ್ನು ಉಚಿತವಾಗಿ ಪಡೆಯುತ್ತೇವೆ. ಆದರೆ ಅವುಗಳಿಗಾಗಿ ನಾವು ದೇವರಿಗೆ ಧನ್ಯವಾದ ಹೇಳುತ್ತೇವೆಯೇ? 'ಇಲ್ಲ' ಎಂದೇ ಹೇಳಬೇಕು. ಆತನು ನಮಗೆ ಉಸಿರಾಡಲು ಉತ್ತಮ ಗಾಳಿ, ಕುಡಿಯಲು ಉತ್ತಮ ನೀರು, ತಿನ್ನಲು ವಿವಿಧ ರೀತಿಯ ನೈಸರ್ಗಿಕ ಆಹಾರಗಳು ಮತ್ತು ಧರಿಸಲು ಹತ್ತಿ ಮತ್ತು ರೇಷ್ಮೆ ಬಟ್ಟೆಗಳನ್ನೂ ಕೊಟ್ಟಿದ್ದಾರೆ. ಆತನು ನಮಗೆ ಬೆಳ್ಳಿ ಮತ್ತು ಚಿನ್ನದಂತಹ ನೈಸರ್ಗಿಕವಾಗಿ ಕಂಡುಬರುವ ಲೋಹಗಳನ್ನು ಮತ್ತು ನಮ್ಮ ದೇಹಕ್ಕೆ ಪ್ರಯೋಜನಕಾರಿಯಾದ ಅನೇಕ ರೀತಿಯ ಖನಿಜ ಲವಣಗಳನ್ನು ಕೊಟ್ಟಿದ್ದಾರೆ. ಆತನು ಬೆಳಕಿಗಾಗಿ ಸೂರ್ಯ, ಚಂದ್ರ ಮತ್ತು ನಕ್ಷತ್ರಗಳನ್ನು, ಬದುಕಲು ಭೂಮಿಯನ್ನು ಸೃಷ್ಟಿಸಿದ್ದಾರೆ. ಇವೆಲ್ಲವುಗಳಿಗಾಗಿ ನಾವು ದೇವರಿಗೆ ಕೃತಜ್ಞತೆ ಹೇಳಲು ಬದ್ಧರಾಗಿದ್ದೇವೆ. ಇವುಗಳಿಗೆ ನಾವು ಕ್ರಯ ಸಲ್ಲಿಸಬೇಕಾದ ಅವಶ್ಯವಿಲ್ಲ. ಎಲ್ಲವನ್ನೂ ಉಚಿತವಾಗಿ ಆನಂದಿಸುತ್ತಿರುವುದರಿಂದ, ಅವುಗಳ ನಿಜವಾದ ಬೆಲೆ ನಮಗೆ ತಿಳಿಯುತ್ತಿಲ್ಲ.
ಅದೇ ರೀತಿ, ಯೇಸು ಕ್ರಿಸ್ತನು ನಮಗೆ ವಿಮೋಚನೆಯನ್ನು ಉಚಿತವಾಗಿ ನೀಡಿದ್ದಾರೆ ಮತ್ತು ನಮ್ಮನ್ನು ನೀತಿವಂತರನ್ನಾಗಿ ಮಾಡಿದ್ದಾರೆ. ಈ ಲೋಕದಲ್ಲಿ ಪಾಪ ಮಾಡಿ ಕೆಟ್ಟು ಹೋದ ನಮಗೆ ದೇವರನ್ನು ಹುಡುಕುವ ಭಾವನೆ ಇಲ್ಲ. ಪಾಪದ ಸಂಬಳ ಮರಣ. ಆ ಮರಣ ಮತ್ತು ಪಾಪದಿಂದ ನಮ್ಮನ್ನು ಬಿಡಿಸುವವರು ಯಾರು? ಅದಕ್ಕಾಗಿಯೇ ಯೇಸು ಪರಲೋಕದಿಂದ ಈ ಭೂಮಿಗೆ ಇಳಿದು ಬಂದು, ನಮ್ಮೆಲ್ಲರ ಪಾಪಗಳಿಗಾಗಿ ಶಿಲುಬೆಗೇರಿಸಲ್ಪಟ್ಟು, ಅನೇಕ ಕಷ್ಟಗಳನ್ನು ಅನುಭವಿಸಿ ಸತ್ತರು. ಅವರು ಮೂರನೆಯ ದಿನದಲ್ಲಿ ಮತ್ತೆ ಜೀವಂತವಾಗಿ ಎದ್ದು ಪರಲೋಕದಲ್ಲಿ ತಂದೆಯ ಬಲಗಡೆಯಲ್ಲಿ ಕುಳಿತಿದ್ದಾರೆ. ಇಷ್ಟು ಕಷ್ಟಪಟ್ಟು ಗಳಿಸಿದ ವಿಮೋಚನೆಯನ್ನು ನಮ್ಮೆಲ್ಲರಿಗೂ ಕರ್ತನು ಉಚಿತವಾಗಿ ನೀಡಿದ್ದಾರೆ. ಆದರೆ ನಮ್ಮ ಶರೀರ ಮತ್ತು ಆತ್ಮ ಕೆಟ್ಟು ಹೋಗುವುದಕ್ಕೆ ತಕ್ಕಂತೆ ಇದೆ. ಅನೇಕರು ಕೆಟ್ಟ ಅಭ್ಯಾಸಗಳಿಗೆ ಗುಲಾಮರಾಗಿ, ಹಣವನ್ನು ವ್ಯರ್ಥ ಮಾಡುವುದಲ್ಲದೆ ತಮ್ಮ ದೇಹವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಹದಿಹರೆಯದವರು ಮತ್ತು ವಯಸ್ಕರು ಸಹ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಮಯ ಕಳೆಯುವ ಮೂಲಕ ತಮ್ಮ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ. ಸಾಧನೆ ಮಾಡಬೇಕಾದ ವಯಸ್ಸಿನಲ್ಲಿರುವ ಅನೇಕ ಯುವಕರು ಇಂತಹ ಪಾಪಗಳಿಗೆ ಗುಲಾಮರಾಗಿ ತಮ್ಮ ಜೀವನ ಮತ್ತು ಭವಿಷ್ಯವನ್ನೇ ಕಳೆದುಕೊಳ್ಳುತ್ತಿದ್ದಾರೆ. ಇವುಗಳಿಂದ ಬಿಡಿಸಲ್ಪಟ್ಟು, ಯೇಸುವಿನ ಉಚಿತವಾದ ವಿಮೋಚನೆಯನ್ನು ಪಡೆಯಲು ಓಡಿ ಬನ್ನಿರಿ. ಇದನ್ನೇ ಯೆಶಾಯ 55:1,2 ರಲ್ಲಿ “ಎಲೈ, ಬಾಯಾರಿದ ಸಕಲ ಜನರೇ, ನೀರಿನ ಬಳಿಗೆ ಬನ್ನಿರಿ, ಹಣವಿಲ್ಲದವನು ಸಹ ಬರಲಿ! ಬನ್ನಿರಿ, ಕೊಂಡುಕೊಳ್ಳಿರಿ, ಉಣ್ಣಿರಿ! ಬಂದು ದ್ರಾಕ್ಷಾರಸವನ್ನೂ ಹಾಲನ್ನೂ ಹಣಕೊಡದೆ ಕ್ರಯವಿಲ್ಲದೆ ತೆಗೆದುಕೊಳ್ಳಿರಿ.
ಆಹಾರವಲ್ಲದ್ದಕ್ಕೆ ಹಣವನ್ನು ಏಕೆ ವ್ರಯಮಾಡುತ್ತೀರಿ? ತೃಪ್ತಿಗೊಳಿಸದ ಪದಾರ್ಥಕ್ಕೆ ನಿಮ್ಮ ದುಡಿತವನ್ನು ವೆಚ್ಚಮಾಡುವದೇಕೆ? ಕಿವಿಗೊಟ್ಟು ನನ್ನ ಮಾತನ್ನು ಕೇಳಿರಿ, ಒಳ್ಳೇದನ್ನೇ ಉಂಡು ಮೃಷ್ಟಾನ್ನದಲ್ಲಿ ಆನಂದಪಡಿರಿ" ಎಂದು ದೇವರು ಹೇಳಿದ್ದಾರೆ.
ಪ್ರಿಯ ದೇವರ ಮಕ್ಕಳೇ, ಸಹೋದರ ಸಹೋದರಿಯರೇ, ಹಣವಿಲ್ಲದೆ, ಕ್ರಯವಿಲ್ಲದೆ ನಿಮ್ಮ ರಕ್ಷಣೆಯನ್ನು ವಿಮೋಚನೆಯನ್ನು ಉಚಿತವಾಗಿ ಯೇಸುವಿನಿಂದ ಪಡೆದು ನಿಮ್ಮ ಶರೀರವನ್ನೂ ಆತ್ಮವನ್ನೂ ಕಾಪಾಡಿಕೊಳ್ಳಿರಿ.
- Mrs. ಭುವನಾ ಧನಪಾಲನ್
ಪ್ರಾರ್ಥನಾ ಅಂಶ:
12 ಕಿಡ್ಸ್ ಕ್ಲಬ್ನಲ್ಲಿರುವ ಮಕ್ಕಳು ಕರ್ತನ ಪ್ರೀತಿಯನ್ನು ತಿಳಿದುಕೊಳ್ಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482